ನಮ್ಮ ಸಹಕಾರಿ ದಿಗ್ವಿಜಯದ ಮತ್ತೊಂದು ಸಹಕಾರಿ ವರ್ಷ ಸಂದಿದೆ. ಈ ಸಹಕಾರ ವರ್ಷ ನಮ್ಮ ಬ್ಯಾಂಕಿಗೆ ಅವಿಸ್ಮರಣೀಯವಾಗಿದೆ, ಕಾರಣ ಒಂದೇ ವರ್ಷದಲ್ಲಿ ಬ್ಯಾಂಕು ಗ್ರಾಹಕರಿಗೆ ವಿಸ್ತಾರವಾದ ಹಾಗೂ ಚಿರಪರಿಚಿತವಾದ ಸೇವೆ ನೀಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ ಬ್ಯಾಂಕ್ನಿಂದ ಆರು ಸ್ಥಳಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಲು ಅನುಮತಿ ಪಡೆದಿರುತ್ತದೆ. ಇದರಲ್ಲಿ ಸಹಕಾರಿ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕು ಪೂರ್ಣಪ್ರಜ್ಞನಗರ, ಕೆಂಗೇರಿ, ರಾಜರಾಜೇಶ್ವರಿ ನಗರ ಆರಂಭಿಸಿದ್ದರೆ. ಈ ತಾರೀಖಿಗೆ ಈಗಾಗಲೇ ವಿದ್ಯಾರಣ್ಯಪುರ ಶಾಖೆ, ಬಿ.ಟಿ.ಎಂ. ಮತ್ತು ರಾಜಾಜಿನಗರ ಶಾಖೆಗಳು ಪ್ರಾರಂಭವಾಗಿರುತ್ತದೆ. ಈ ರೀತಿ ಬ್ಯಾಂಕು ಈಗ ಎಂಟು ಶಾಖೆಗಳಿಂದ ಪರಿಪೂರ್ಣ ಸೇವೆ ನೀಡುತ್ತಿದೆ.
ಈ ಎಲ್ಲಾ ಶಾಖೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಎರಡು ಶಾಖೆಗಳು ಈಗಾಗಲೇ ರೂ.50 ಕೋಟಿಗೂ ಮೀರಿದ ಠೇವಣಿ ಸಂಗ್ರಹಿಸಿವೆ. ಉಳಿದ ಶಾಖೆಗಳು ಕೂಡ ಗಣನೀಯ ಪ್ರಗತಿ ಸಾಧಿಸಿವೆ. ಇದು ಸಹೃದಯ ಸದಸ್ಯರು, ಗ್ರಾಹಕ, ಬಂಧುಗಳು ನಮ್ಮ ಮೇಲೆ ಇರಿಸಿದ ನಂಬಿಕೆಗೆ ಬಲವಾದ ಸಾಕ್ಷಿ. ಇನ್ನು ಬ್ಯಾಂಕಿನ ಎ.ಟಿ.ಎಂ ಕಾರ್ಡ್ ಈಗಾಗಲೇ ಪ್ರಚಾರದಲ್ಲಿದ್ದು ಖಾತೆದಾರರಿಂದ ಅಭೂತಪೂರ್ವ ಬೆಂಬಲ ದೊರೆತಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ.
ಇಂದು ಇಡೀ ಜಗತ್ತು ಜಾಹೀರಾತಿನ ಮೋಹಕ ಮಾಯಾಜಾಲದ ಪ್ರಪಂಚದಲ್ಲಿ ಸಿಲುಕಿದೆ.ಆದರೆ ನಮ್ಮ ಬ್ಯಾಂಕು ಇದರಿಂದ ದೂರವಿದ್ದು ಉತ್ತಮ ಸೇವೆ ಪಡೆದ ಗ್ರಾಹಕರೇ ನಮ್ಮ ಜಾಹೀರಾತು ಪ್ರತಿನಿಧಿ ಎನ್ನುವ ತತ್ವಕ್ಕೆ ಬದ್ದವಾಗಿದೆ. ದುರದೃಷ್ಠವಶಾತ್ ಇಂದಿನ ಬ್ಯಾಂಕಿಂಗ್ ಪ್ರಪಂಚ ಹಗರಣಗಳ ಸರಮಾಲೆಯಿಂದ ತತ್ತರಿಸುತ್ತಿರುವಾಗ ನಿಮ್ಮ ನಂಬಿಕೆಗೆ ನಾವು ನೀಡುತ್ತಿರುವ ಆರೋಗ್ಯಕರ ಫಲಿತಾಂಶಗಳೇ ಮೈಲಿಗಲ್ಲು. ಪ್ರಸ್ತುತ ಸಾಲಿನಲ್ಲಿ ಭಾರತೀಯ ರಿಸರ್ವ ಬ್ಯಾಂಕಿನ ಪರಿವೀಕ್ಷಣೆ ಕೂಡ ನಮ್ಮ ಬ್ಯಾಂಕಿನಲ್ಲಿ ನಡೆದಿದ್ದು ಸದರಿ ಅಧಿಕಾರಿಗಳು ಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ವೃತ್ತಿಪರರು, ತಜ್ಞರು, ಅನುಭವಿಗಳ ಕೊರತೆ ಇದ್ದು ಅವುಗಳಲ್ಲಿ ಸಹಕಾರಿ ಹಿತಾಸಕ್ತರೆ ತುಂಬಿರುತ್ತಾರೆ ಎನ್ನುವ ಲೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ ನಮ್ಮ ಬ್ಯಾಂಕು ಇದಕ್ಕೆ ಹೊರತಾಗಿದ್ದು ಉತ್ತಮ ಅನುಭವಗಳನ್ನು ಹೊಂದಿದ ನಿರ್ದೇಕರನ್ನು ಯಾವುದೇ ಸ್ಥಾನ ಖಾಲಿ ಇಲ್ಲದಂತೆ ನಿಯಮಾನುಸಾರ ಭರ್ತಿ ಮಾಡಿ ಕೊಂಡಿರುತ್ತದೆ. ಬ್ಯಾಂಕಿಂಗ್ ಆರ್ಥಿಕ ಸುಧಾರಣೆ ಮತ್ತು ಉದಾರೀಕರಣದ ನಂತರ ಬ್ಯಾಂಕುಗಳು ಮೈ ಚಳಿಬಿಟ್ಟು ಸಾಲ ನೀಡುತ್ತಿವೆಯಾದರೂ ಇತ್ತೀಚಿನ ಕಪ್ಪು ಚುಕ್ಕೆಗಳಿಂದ ಬ್ಯಾಂಕುಗಳು ಮೊದಲಿನ ಮಡಿವಂತಿಕೆಗೆ ಕ್ರಮೇಣ ಅಂಟಿಕೊಳ್ಳಬಹುದೆನೋ ಎನ್ನುವ ಭಯ ಇರುವ ಕಾಲದಲ್ಲೂ ಕೂಡ ನಮ್ಮ ಬ್ಯಾಂಕು ಉದ್ಯೋಗ ಸೃಷ್ಠಿ, ಉತ್ಪಾದನೆ, ಗೃಹ ಖರೀದಿ, ಗೃಹ ನಿರ್ಮಾಣ ಇತ್ಯಾದಿ ಉತ್ತಮ, ಉದ್ದೇಶ ಗಮನಿಸಿ ಸಾಲ ನೀಡುವಿಕೆಯಲ್ಲಿ ಭಾರತೀಯ ರಿಸರ್ವ ಬ್ಯಾಂಕಿನ ನಿರ್ದೇಶನದ ಅನ್ವಯ ಇರುವ ಸಿ.ಡಿ. ರೇಷಿಯೋ ಕಾದುಕೊಂಡಿದೆ. ಸಾಲವಸೂಲಿಯಲ್ಲಿ ಕೂಡಾ ನಮ್ಮ ಬ್ಯಾಂಕು ಪ್ರತಿಬಾರಿಯಂತೆ ದಾಖಲೆ ನಿರ್ಮಿಸಿ ಅತೀ ಕಡಿಮೆ NPA ಹೊಂದಿದೆ ಎಂದು ತಿಳಿಸಲು ಹರ್ಷವಾಗುತ್ತದೆ.
ಜಿ.ಎಸ್.ಟಿ., ನೋಟು ಅಮಾನ್ಯಕರಣ, ಚುನಾವಣೆ, ಎಸ್. ಎಲ್.ಬಿ.ಸಿ. ಸಮಿತಿ ರಚನೆ ಇತ್ಯಾದಿಗಳಿಂದ ಬ್ಯಾಂಕಿನ ಚಟುವಟಿಕೆಗಳ ಮೇಲೆ ಸ್ವಲ್ಪ ಹಿಡಿತ ಇರುವುದರಿಂದ ಗ್ರಾಹಕರಿಗೆ ಆಗುವ ತೊಂದರೆಗಳು ಕೈಮೀರಿದ ವಾಸ್ತವಾಂಶವಾಗಿದೆ. ಆದರೆ ಇವೆಲ್ಲದರ ಮೂಲ ಉದ್ದೇಶ ಬ್ಯಾಂಕಿಂಗ್ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತರುವುದಾಗಿದೆ. RTGS , NEFT ವ್ಯವಹಾರನಮ್ಮ ಬ್ಯಾಂಕಿನಲ್ಲಿ ಪರಿಚಯಿಸಿ ಬ್ಯಾಂಕಿನ ವ್ಯವಹಾರ ಮುಖ್ಯವಾಗಿ ಪ್ರತೀ ತಿಂಗಳ ನಿಶ್ಚಿತ ಠೇವಣಿ ಬಡ್ಡಿ ಕಳುಹಿಸುವ ಕಾರ್ಯ ಸುಗಮವಾಗಿ ತ್ವರಿತವಾಗಿ ನಡೆಯುತ್ತಿದೆ. ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿಯೇ ವಿಶೇಷವೆನಿಸಿದ ಸೇವಾ ವಿಭಾಗ ಒಂದನ್ನು ಪ್ರಧಾನ ಕಛೇರಿಯ ಕೆಳಮಹಡಿಯಲ್ಲಿಯೇ ಅತೀ ಹಿರಿಯ ನಾಗರಿಕರಿಗೆ ಮತ್ತು ವಿಕಲಾಂಗಚೇತನರಿಗೆ ಆರಂಭಿಸಿದ್ದು ಬಹಳಷ್ಟು ಪ್ರಶಂಸೆಗೆ ಒಳಗಾಗಿರುತ್ತದೆ.
ತಮ್ಮ ಆಸೆ ಆಕಾಂಕ್ಷೆಗಳನ್ನು ಸದಾ ಸ್ಪಂದಿಸಿ ಸಹಕರಿಸುವುದೇ ನಮ್ಮ ಧ್ಯೇಯ.
ಡಾ|| ಕೆ ರಾಮಕೃಷ್ಣ
MA,Dip in Journalism.ಸಂಸ್ಥಾಪಕರು ಹಾಗೂ ಅಧ್ಯಕ್ಷರು.